Scientific Name : Pterocarpus santalinus
ಶ್ರೀಗಂಧದಂತೆ ಗುಣಗಳು ಹಾಗೂ ಬೆಲೆ ಬಾಳುವ ಮರವಾಗಿದೆ. ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಉರುಟಾದ ಅಂಗೈ ಅಗಲದ ಮೂರು ಮೂರು ಎಲೆಗಳು ಒಟ್ಟಾಗಿ ಕಂಡು ಬರುತ್ತದೆ. ಗೊಂಚಲಲ್ಲಿ ಕಂಡುಬರುವ ಹಳದಿ ಬಣ್ಣದ ಹೂಗಳು ಹಾಗೆ ಮುಂದಕ್ಕೆ ಎಲೆಯಂತೆ ಉರುಟಾದ ಮಧ್ಯೆ ಬೀಜದಿಂದ ಕೂಡಿದ ಫಲ ಒಳಗೆ ಮಂಜೊಟಿ ಬೀಜದಂತೆ ಕೆಂಪಾದ ಬೀಜಗಳು ಇರುತ್ತದೆ. ಕಪ್ಪಾದ ದೊರಗು ಕಾಂಡ, ಕೆತ್ತಿದರೆ ಕೆಂಪಾದ ರಸ ಸುರಿಯುವುದು. ಒಳಗೆ ದೃಡವಾದ ಕೆಂಪು ತಿರುಳು. ಇದು ಔಷಧಿಗೆ ಉಪಯೋಗಿಸುವ ರಕ್ತ ಚಂದನ.
ರಕ್ತ ಚಂದನದ ಕೆತ್ತನೆಗಳು, ಪೀಟೊಪಕರಣಗಳು ಸಂಗ್ರಹಯೋಗ್ಯ ಆದರೆ ತುಂಬಾ ಬೆಲೆಬಾಳುವುದು. ಅತಿ ಉಪಯೋಗದಿಂದ ಇಂದು ನಶಿಸಿ ಹೋಗುವ ಸಸ್ಯ ಸಂಕುಲದ ಪಟ್ಟಿಯಲ್ಲಿದೆ. ಇದರ ಸಂಗ್ರಹ ಹಾಗೂ ಮಾರಾಟದ ಮೇಲೆ ನಿರ್ಭಂದ ಇದೆ.

ಇದನ್ನು ಸೌಂರ್ಯ ವಧÀðವಾಗಿ,ಅಜೀರ್ಣ, ಮಧುಮೇಹ ಚರ್ಮವ್ಯಾಧಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆಹಾರದಲ್ಲಿ ನೈಸರ್ಗಿಕ ಬಣ್ಣವಾಗಿ ಇದನ್ನು ಉಪಯೋಗಿಸಲಾಗುತ್ತದೆ.
ಸೌಂರ್ಯ ವರ್ದಕ : ಸೌಂರ್ಯದ ಬಗ್ಗೆ ಬಹಳ ಕಾಳಜಿ ಇರುವ ಕಾಲದಲ್ಲಿ ನಾವಿದ್ದೇವೆ. ಆಸ್ಪತ್ರೆ, ಮೆಡಿಕಲ್ ಶಾಪ್ಗಳು ಇದ್ದಷ್ಠು ಬ್ಯೂಟಿ ಪಾರ್ಲರ್ಗಳೂ ನಮ್ಮ ಸುತ್ತ ಮುತ್ತ ಇದೆ. ಮುಖ ಬಿಳಿಯಾಗಿರಬೇಕು, ಮೊಡವೆ, ಕಲೆಗಳು ಇರಬಾರದು ಇದು ಎಲ್ಲರ ಕಾಳಜಿ. ರಕ್ತ ಚಂದನ ಕೊರಡನ್ನು ನೀರಲ್ಲಿ ಅರೆದು ಅಥವಾ ನಯವಾದ ಪುಡಿಯನ್ನು ನೀರಲ್ಲಿ ಕಲಸಿ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಬೇಕು. ಅಥವಾ ಪುಡಿಯನ್ನು ಜೇನಿನೊಂದಿಗೆ ಮಿಶ್ರಮಾಡಿ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯುವುದರಿಂದ ಮುಖದ ಕಲೆಗಳು, ಕಪ್ಪು ಚುಕ್ಕಿಗಳು (Black heads) ಕಡಿಮೆಯಾಗುವುದು. ಮೊಡವೆ ಇರುವಾಗಲೂ ಇದನ್ನು ನೀರಲ್ಲಿ ಕಲಸಿ ಹಚ್ಚಬೇಕು. ಇದರೊಂದಿಗೆ ಅರ್ಧ ಚಮಚದಷ್ಟು (೧/೨ ಗ್ರಾಂ) ಅರ್ಧ ಗ್ಲಾಸ್ ನೀರಿನಲ್ಲಿ ಕಲಸಿ ದಿನಕ್ಕೆರೆಡು ಸಲ ೧-೨ ತಿಂಗಳು ಸೇವಿಸಬೇಕು. ಮುಖದ ತುಂಬಾ ಮೊಡವೆಗಳು ಇದ್ದರೆ ರಕ್ತ ಚಂದನ ಮತ್ತು ಕೈಬೇವಿನ ಎಲೆ ಸಮಪ್ರಮಾಣ ಇದರ ಅರ್ಧ ಪ್ರಮಾಣ ಅರಸಿನ ಸೇರಿಸಿ ನಯವಾದ ಪುಡಿಮಾಡಿ ನೀರಲ್ಲಿ ಮಿಶ್ರಮಾಡಿ ಮುಖಕ್ಕೆ ಹಚ್ಚುವುದರಿಂದ ಹೆಚ್ಚು ಪರಿಣಾಮ ನೀಡುವುದು. ಇದರಿಂದ ಮೊಡವೆ ಮಾಸುವುದಲ್ಲದೆ ಹೊಸ ಮೊಡವೆಗಳು ಉತ್ಪತ್ತಿಯಾಗಲಾರದು. ಫೇಸ್ ಪ್ಯಾಕ್ ಆಗಿ ಉಪಯೋಗಿಸುವುದಿಂದ ಮುಖದ ಕಾಂತಿ ಹೆಚ್ಚಾಗುವುದು.

ತುರಿಕೆ, ಕಜ್ಜಿ, ದಡಿಕೆ : ಸೆಖೆಯ ಪರಾಕಾಷ್ಠೆಯನ್ನು ಈ ವರ್ಷ ಅನುಭವಿಸುತ್ತಿದ್ದೇವೆ. ಚರ್ಮದಲ್ಲಿ ತುರಿಕೆಯೊಂದಿಗೆ ದಡಿಕೆ ಅಲ್ಲದೆ ಸಣ್ಣ ಸಣ್ಣ ಕುರಗಳು ಮೈಯಲ್ಲಿ ಕಂಡುಬರುತ್ತದೆ. ರಕ್ತ ಚಂದನ ಶರೀರಕ್ಕೆ ತಂಪು ನೀಡುವುದರಿಂದ ಇದರ ಪುಡಿಯನ್ನು ಅರ್ಧ ಚಮಚದಷ್ಟು ಹಾಲಿನೊಂದಿಗೆ ಕುಡಿಯುವುದಲ್ಲದೆ ಮೈಗೂ ನೀರಲ್ಲಿ ಕಲಸಿ ಹಚ್ಚುವುದರಿಂದ ಉಪಶಮನವಾಗುವುದು. ನಾವು ಅನುಭವಿಸುವ ಉರಿ, ದಾಹ ಕಡಿಮೆಯಾಗುವುದು.
ಮಧುಮೇಹ : ಡಯಾಬಿಟಿಸ್ ಜಾಸ್ತಿ ಇರುವಾಗ ಬಾಯಾರಿಕೆ ಜಾಸ್ತಿ ಇರುತ್ತದೆ. ಕಾಲು ಉರಿಬಂದಂತೆ ಅನುಭವ ಆಗುವುದು. ಇಂತಹ ಸಂದರ್ಭಗಳಲ್ಲಿ ಒಂದು ಗ್ರಾಂ ನಷ್ಟು ಅರೆದು ನೀರಲ್ಲಿ ಕುಡಿಯಬಹುದು ಇಲ್ಲವೇ ಒಂದು ಗ್ರಾಂ ನಷ್ಟು ನಯವಾದ ರಕ್ತ ಚಂದನ ಚೂರ್ಣವನ್ನು ನೀರಲ್ಲಿ ಕಲಸಿ ದಿನಕ್ಕೆ ೨ ಸಲ ಕುಡಿಯುವುದರಿಂದ ಬಾಯಾರಿಕೆ ಉರಿ ಕಡಿಮೆಯಾಗುವುದಲ್ಲದೆ ಮಧುಮೇಹವೂ ಸ್ವಲ್ಪ ಕಡಿಮೆಯಾಗುವದು. ಉಪಯೋಗಿಸುತ್ತಿರುವ ಮಧುಮೇಹ ಔಷಧಿಗಳನ್ನು ತಕ್ಷಣ ಬಿಡದೆ ವೈದ್ಯರ ಸಲಹೆಯಂತೆ ಮುಂದುವರಿಸಬೇಕು.
ಭೇದಿ: ತುಂಬಾ ಸಮಯದಿಂದ ಭೇದಿಯ ತೊಂದರೆ ಅನುಭವಿಸುತ್ತಿದ್ದರೆ ಇದರ ದೊರಗು ಪುಡಿಯನ್ನು ಕಷಾಯಮಾಡಿ ದಿನಕ್ಕೆರಡು ಸಲ ಒಂದು ವಾರ ಕುಡಿಯುವುದರಿಂದ ಕಡಿಮೆಯಾಗುವುದು. ಜೀರ್ಣಕ್ರಿಯೆವೃದ್ಧಿಯಾಗುವುದು

ಬಾವು ನೋವು : ಅಲರ್ಜಿಯಿಂದ ಶರೀರದ ಭಾಗದಲ್ಲಿ ಬಾವು ಹಾಗೂ ನೋವು ಇದ್ದರೆ ಇದನ್ನು ನೀರಲ್ಲಿ ಅರೆದು ಆಯಾಭಾಗಕ್ಕೆ ಹಚ್ಚಬೇಕು. ೩-೫ ಗಂಟೆ ನಂತರ ತೊಳೆದು ತೆಗೆಯಬೇಕು.
ಜೇಡ ಕಡಿತ : ಕೆಲವು ಜಾತಿಯ ಜೇಡ ಕಚ್ಚಿದರೆ ತುರಿಕೆಯೊಂದಿಗೆ ಚರ್ಮ ದಪ್ಪ ಆಗುವುದು. ಆ ಭಾಗಕ್ಕೆ ರಕ್ತ ಚಂದನ ಅರೆದು ಹಚ್ಚುವುದರಿಂದ ಕಡಿಮೆಯಾಗುವುದು.
ಶಿಶುಗಳ ಮತ್ತು ಗರ್ಭಿಣಿಯರ ಮೈದಡಿಕೆ ತುರಿಕೆಯಲ್ಲಿ ನಿರ್ಭೀತಿಯಿಂದ ಇದನ್ನು ಹಚ್ಚ ಬಹುದು ಹಾಗೂ ಹೊಟ್ಟೆಗೂ ಸೇವಿಸಬಹುದು.
ಕೃಷಿ : ಬೀಜದಿಂದ ಗಿಡ ಬಹಳ ನಿಧಾನವಾಗಿ ಬರುವುದು. ಅರಣ್ಯ ಇಲಾಖೆಯವರು ಈ ಗಿಡವನ್ನು ಪ್ರತಿ ವರ್ಷ ವಿತರಿಸುತ್ತಾರೆ. ಆಯುರ್ವೇದ ಫಾರ್ಮಸಿಗಳಿಗೆ ಅಗತ್ಯ ವಿರುವುದರಿಂದ ಬೆಳಸಿ ವಾಣಿಜ್ಯ ಕೃಷಿಯಾಗಿ ಆಭಿವೃದ್ಧಿ ಪಡಿಸಬಹುದು.
ಡಾ.ಹರಿಕೃಷ್ಣ ಪಾಣಾಜೆ