Scientific Name: Cyperus rotundus
“ಮುಸ್ತೇ ಸಂಘತೆ ಜಾಯತೆ ಇತಿ”| ಗುಚ್ಚಗಳಾಗಿ ಹುಲುಸಾಗಿ ಭೂಮಿಯಲ್ಲಿ ಹರಡಿಕೊಂಡಿರುವ ಹುಲ್ಲು ಜಾತಿಯ ವನಸ್ಪತಿಗೆ ಮುಸ್ತ ಎನ್ನುತ್ತಾರೆ. ಭದ್ರಮುಷ್ಠಿ ಎಂಬ ಹೆಸರೂ ಇದೆ. ಮುಷ್ಠಿ ಸೇರಿಸಿ ಇದನ್ನು ಎಳೆದರೂ ಭದ್ರವಾಗಿ ಭೂಮಿಗೆ ಅಂಟಿಕೊಂಡಿರುವ ಗಟ್ಟಿ ಹುಲ್ಲು. ರಸ್ತೆಯ ಬದಿಗಳಲ್ಲಿ, ಅಂಗಳದಲಿ,್ಲ ತೊಟದಲ್ಲಿ ನೀರಿನ ಆಶ್ರಯ ಇದ್ದರೆ ದಪ್ಪ ಬೆಳೆಯುತ್ತದೆ. ಬಹು ವರ್ಷ ಬಾಳುವ ಗಡ್ಡೆಯಿಂದ ಕೂಡಿದ ಹುಲ್ಲು. 5-6 ಸೆಂಟಿಮೀಟರ್ಉ ದ್ದದ ತೆಳುವಾದ ಮೃದುವಾದ ಅಲಗಿನ ಎಲೆ. ಹೂ 3 ರಿಂದ 7 ಇಂಚು ಉದ್ದವಾಗಿದ್ದು ಹೂವಿನ ಕಡ್ಡಿ ಗಿಡದ ಮೂಲದಿಂದ ಹೊರಬಂದಿರುತ್ತದೆ. ಒಮ್ಮೆ ಹೂವಾಗಿ ಒಣಗಿ ಹೋದರೆ ಮುಂದಿನ ಮಳೆಗಾಲದಲ್ಲಿ ಸಮೃದ್ಧವಾಗಿ ಚಿಗುರೊಡೆದು ಬೆಳೆಯುತ್ತದೆ. ಬುಡದಲ್ಲಿ ಅರ್ಧ ಇಂಚು ವ್ಯಾಸದ ಅಂಡಾಕಾರದ ಸಣ್ಣ ಸಣ್ಣ ಬೇರಿನಿಂದ ಕೂಡಿದ ಗಡ್ಡೆಗಳು ಇರುತ್ತದೆ. ಹೊರಗಿನಿಂದ ಕಪ್ಪಾಗಿದ್ದರೆ ಒಳಗೆ ಬಿಳಿಯಾಗಿರುತ್ತದೆ. ಗಡ್ಡೆ ಪುಡಿಮಾಡಿದರೆ ಸುಗಂಧ ಭರಿತವಾಗಿರುತ್ತದೆ. ಹಂದಿಗಳಿಗೆ ಇದರ ಗಡ್ಡೆ ಎಂದರೆ ಬಹಳ ಇಷ್ಟ. ತಿಳಿಯದವರಿಗೆ ಇದೊಂದು ಕಳೆ. ಈ ಕಳೆ ನಿವಾರಿಸಲು ಕೃಷಿಕರು ಬಹಳಷ್ಟು ಶ್ರಮ ಪಡುತ್ತಾರೆ. ಆದರೆ ವೈದ್ಯ ಜಗತ್ತಿಗೆ ಇದೊಂದು ವರ.
ಗಡ್ಡೆಯನ್ನು ತೊಳೆದು ಒಣಗಿಸಿ ಸಂಗ್ರಹಿಸಬಹುದು. ಇದು ಹಸಿವು ಉಂಟುಮಾಡುವುದು. ಜೀರ್ಣ ಕ್ರಿಯೆ ವೃದ್ಧಿಸುವುದು. ಅತಿಸಾರ, ಕ್ರಿಮಿಬಾಧೆಗಳನ್ನು ನಿವಾರಿಸುವುದು.
![](https://sdpayurveda.com/wp-content/uploads/Screenshot-2023-12-21-171623.png)
ಅಜೀರ್ಣ ಮತ್ತು ಭೇದಿ:
ಅಜೀರ್ಣ ಆದರೆ ಲೂಸ್ ಮೋಷನ್ಸ್ವಾಭಾವಿಕವಾಗಿ ಕಂಡುಬರುತ್ತದೆ 10ಗ್ರಾಂ ಭದ್ರಮುಷ್ಠಿ ಗಡ್ಡೆಯನ್ನು ಪುಡಿಮಾಡಿ ನಾಲ್ಕು ಲೋಟ ನೀರು ಹಾಕಿ ಕುದಿಸಿ ಒಂದು ಲೋಟ ಮಾಡಿ ಸೋಸಿ ಕುಡಿದರೆ ಹಸಿವು ಉಂಟಾಗುವುದು. ಭೇದಿ ನಿಲ್ಲುವುದು. ಅಥವಾ ಮುಸ್ತ ಗಡ್ಡೆಯೊಂದಿಗೆ ಸ್ವಲ್ಪ ಹಸಿ ಶುಂಠಿ ಸೇರಿಸಿ ಕಷಾಯ ಮಾಡಿ ಜೇನು ಸೇರಿಸಿ ಕುಡಿದರೂ ನೀರಾಗಿ ಮಲವಿಸರ್ಜನೆಯಾಗುವುದು ನಿಲ್ಲುವುದು. ಆಗಾಗ ಮಲವಿಸರ್ಜನೆಯಾಗುವುದು, ಮಲಬಂದಂತಾಗುವುದು, ನೀರಾಗಿ, ಕೆಲವೊಮ್ಮೆ ಗಟ್ಟಿಯಾಗಿ ಮಲವಿಸರ್ಜನೆಯಾಗುವಂತಹ ಬಹಳ ಕಷ್ಟಕರ ತೊಂದರೆಯನ್ನು ಕೆಲವರು ಹಲವು ವರ್ಷಗಳಿಂದ ಔಷಧಿ ಮಾಡಿದರೂ ಗುಣವಾಗದೆ ಕಷ್ಟ ಪಡುತ್ತಿರುತ್ತಾರೆ. ಇದಕ್ಕೆ ಐಬಿಎಸ್ (ಇರಿಟೇಬಲ್ ಬವೆಲ್ ಸಿಂಡ್ರೋಮ್) ಎನ್ನುತ್ತಾರೆ. ಇದಕ್ಕೂ ಮುಸ್ತ ಪರಿಣಾಮಕಾರಿಯಾಗಿದೆ.
![](https://sdpayurveda.com/wp-content/uploads/Screenshot-2023-12-21-171645.png)
ಕ್ರಿಮಿಬಾಧೆ:
ಮುಸ್ತ ಗಡ್ಡೆ ಮತ್ತು ಪಪ್ಪಾಯ ಬೀಜ 3-4ಗ್ರಾಂ ನಷ್ಟು ಪುಡಿಮಾಡಿ ಬೆಳಗ್ಗೆ ಮತ್ತು ರಾತ್ರಿ ಆಹಾರದ ಮೊದಲು ಮೂರು ದಿನ 1/2 ಗ್ಲಾಸ್ ನೀರಿನೊಂದಿಗೆ ಸೇವಿಸಿದರೆ ಕ್ರಿಮಿ ಹುಳದ ಬಾಧೆ ನಿವಾರಣೆ ಆಗುವುದು. ಗ್ಯಾಸ್ಟ್ರಿಕ್ ತೊಂದರೆ ಇರುವವರು ಇದರ ಕಷಾಯವನ್ನು ಮಜ್ಜಿಗೆಯೊಂದಿಗೆ 1/4 ಚಮಚ ಶುಂಠಿ ಪುಡಿ ಸೇರಿಸಿ ಒಂದು ವಾರ ಕುಡಿದರೆ ಕಡಿಮೆಯಾಗುವುದು. ಎದೆ ಹಾಲು ತೊಂದರೆ ಇದ್ದರೆ ಮಗು ಭೇದಿ, ವಾಂತಿ ಮಾಡುತ್ತದೆ. ಭದ್ರಮುಷ್ಠಿ ಕಷಾಯ ಮಾಡಿ ಬಾಣಂತಿ ಕುಡಿಯುವುದರಿಂದ ಹಾಲು ದೋಷರಹಿತವಾಗಿ ಮಗುವಿನ ಆರೋಗ್ಯ ವೃದ್ಧಿಸುವುದು. ಸ್ತನ್ಯ ವೃದ್ಧಿಯೂ ಆಗುವುದು.
ಬೆವರು ಸಾಲೆ, ತುರಿಕೆಗಳು ಇರುವಾಗ ಭದ್ರಮುಷ್ಠಿ ಗಡ್ಡೆಯ ನಯವಾದ ಪುಡಿಯನ್ನು ಮೈ ಮೇಲೆ ಸವರಬಹುದು ಅಥವಾ ನೀರಲ್ಲಿ ಕಲಸಿ ಮೈಗೆ ಹಚ್ಚಿ 2-3 ಗಂಟೆ ನಂತರ ಸ್ನಾನ ಮಾಡಬಹುದು. ಬೆವರು ವಾಸನೆ ಇರುವವರೂ ಇದನ್ನು ಅನುಸರಿಸುವುದರಿಂದ ಪ್ರಯೋಜನ ಪಡೆಯಬಹುದು.
ಭದ್ರಮುಷ್ಠಿ, ನೆಲ್ಲಿಕಾಯಿ ಕಷಾಯ ದೊಂದಿಗೆ ಮಜ್ಜಿಗೆ ಸೇರಿಸಿ ತಲೆಗೆ ನಿರಂತರ ಧಾರೆ ಎರೆಯುವುದರಿಂದ ಹಲವಾರು ಶಿರೋರೋಗಗಳನ್ನು ನಿವಾರಿಸಲಾಗುತ್ತದೆ. ಕಳೆಯಾಗಿ ಗುರುತಿಸಿದ ಭದ್ರಮುಷ್ಠಿ ಶರೀರದ ರೋಗವೆಂಬ ಕೊಳೆಯನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.
![](https://sdpayurveda.com/wp-content/uploads/Screenshot-2023-12-21-171720.png)
ಡಾ| ಹರಿಕೃಷ್ಣ ಪಾಣಾಜೆ